ತೇಜಸ್ವಿಯವರನ್ನೊಮ್ಮೆ ಭೇಟಿ ಮಾಡಿದಾಗ ಅವರು ತುಂಬಾ ಸಾವಧಾನವಾಗಿ ಮಾತನಾಡುತ್ತಿದ್ದರು. ಅದು ಅವರ ಪಕ್ಷಿಗಳ ಫೋಟೋ ಪ್ರದರ್ಶನ ಕಾರ್ಯಕ್ರಮ “ಚಿತ್ರಕಲಾ ಪರಿಷತ್ತಿನಲ್ಲಿ”. ಅವತ್ತು ತಪ್ಪಿಸಿಕೊಂಡು ತಿರುಗುತ್ತಿದ್ದ ಪಕ್ಷಿಯೊಂದರ ಬಗ್ಗೆ ಅವರು ಹೇಳಿದ್ದು, ಅದರ ಕಷ್ಟ ಕೋಟಲೆಗಳು, ಅದಕ್ಕೆ ಬೇಕಾಗುವ ತಾಳ್ಮೆ, ಏಕಾಗ್ರತೆ, ದುಬಾರಿ ಕ್ಯಾಮೆರಾ ಮತ್ತದರ ಲೆನ್ಸ್ ಗಳು, ಫೋಟೋ ತೆಗೆದನಂತರ ಮಾಡುವ ಡಿಜಿಟಲ್ ಬದಲಾವಣೆಗಳು ಇತ್ಯಾದಿ. ಅವರನ್ನು ಶಾರ್ಟ್ ಟೆಂಪೆರ್ ಅನ್ನುತ್ತಿದ್ದವರಿಗೆ ಇದೆಲ್ಲ ಅರ್ಥವಾದರೆ ಅದು ಬೇರೆಯೇ ಸಾಧ್ಯತೆಗಳನ್ನ ಹೊಮ್ಮಿಸೀತು ಅನ್ನಿಸಿದೆ ನನಗೆ. ಮಾಯಾಲೋಕ - ೧ ಬಂದಾಗ ಅದನ್ನು ಓದಿ ನಂತರ ಅಂತಹಾ ಎಂಟು ಲೋಕಗಳನ್ನು ಬರೆಯುವ ಅವರ ಯೋಜನೆಯನ್ನು ಎಲ್ಲೋ ಕೇಳಿ ಕಾತರಿಸಿದ್ದೆವು ಆದರೆ ಅವರೇ ಇಲ್ಲವಾದರು! ಅರ್ಬನ್ ಪರಿಸರದಲ್ಲಿ ಹುಟ್ಟಿದ ಹುಡುಗರಿಗೆ ಅವರು ನೋಡಿರದ ಲೋಕವೊಂದರ ಅನೂಹ್ಯತೆಯನ್ನ ಹಾಗೆಯೇ ಸೆಮಿ ಅರ್ಬನ್ ಅಥವಾ ಹಳ್ಳಿ ಗಳಲ್ಲಿ ಹುಟ್ಟಿ ಪಟ್ಟಣಕ್ಕೆ ಬಂದ ಹುಡುಗ/ಗಿಯರಿಗೆ ಅವರು ಬಿಟ್ಟು ಬಂದ ಮತ್ತು ಬಹುಶ ಮತ್ತೆ ಹೋಗಲಾಗದ (?) ಪರಿಸರವೊಂದರ ಅದರ ಅಗಾಧ ಸೆಳೆತವನ್ನ ತೇಜಸ್ವಿಯವರ ಬರಹಗಳು ಉಳಿಸಿಕೊಂಡಿರುವುದರಿಂದ ಅದು ಇವತ್ತಿಗೂ ತನ್ನ ಸೆಳೆತವನ್ನು ಹೆಚ್ಚಿಸಿಕೊಳ್ಳುತ್ತಿದೆ. ನಾವು ಬಯಸಿದ ಆದರೆ ಬದುಕಲಾರದ ಬದುಕು ಸದಾ ಸೆಳೆಯುತ್ತಲೇ ಇರುತ್ತದೆ ಥೇಟ್ ತೇಜಸ್ವಿಯ ಹಾಗೇ! ಇಲ್ಲಿರುವ ಎಲ್ಲ ಪ್ರಸಂಗಗಳೂ ಅವರನ...