ಕವಿರಾಜ್ ಸರ್
ನಿಮ್ಮ ಸಿನಿ ಸಿನಿ ನೆನಪುಗಳ ಗುಚ್ಛವನ್ನ ಪೂರ್ತಿಯಾಗಿ ಓದಿ ಮುಗಿಸಿದಮೇಲೆ ನನಗನ್ನಿಸಿದ್ದನ್ನ ಸಂಕ್ಷಿಪ್ತವಾಗಿ ಹೇಳಿಬಿಡಬೇಕು ಅನ್ನಿಸಿತು. ಇದು ಪುಸ್ತಕ ವಿಮರ್ಶೆಯಂತೂ ಖಂಡಿತಾ ಅಲ್ಲ…ನೆನಪುಗಳನ್ನು ಎಂತ ವಿಮರ್ಶೆ ಮಾಡುವುದು? ಅವುಗಳನ್ನು ಸವಿಯಬೇಕಷ್ಟೆ. ಎಲ್ಲದಕ್ಕಿಂತ ಮೊದಲಿಗೆ ನನಗೆ ನಿಮ್ಮ ಸರಳತೆ, ನೇರವಂತಿಕೆ ಮತ್ತು ಸ್ಪುಟವಾದ ಭಾಷೆ ಇಷ್ಟವಾಯಿತು. ಕವಿತೆ ಬರೆಯುವ ಹಲವರ ಗದ್ಯ ಯಾಕೋ ಓದಲು ಅಷ್ಟು ಚೇತೋಹಾರಿಯಾಗಿರಲ್ಲ, ಅಥವಾ ಕವಿಗಳಿಗೆ ಸುಧೀರ್ಘವಾಗಿ ಬರೆಯುವ ವ್ಯವಧಾನ ಆಸಕ್ತಿ ಇರುವುದಿಲ್ಲವೇನೋ…ನೀವು ಹಾಗಲ್ಲವೇ ಅಲ್ಲ.
ನಿಮ್ಮ ಒಡನಾಟಕ್ಕೆ ಬಂದವರ, ಕೈ ಹಿಡಿದು ತಂದವರ, ಸಹಾಯಹಸ್ತ ಚಾಚಿದವರ ಬಗ್ಗೆಯೆಲ್ಲಾ ಎಷ್ಟೊಂದು ಅಭಿಮಾನದಿಂದ ಬರೆದಿದ್ದೀರಾ. ಹಾಗೆಯೇ ಸಭ್ಯತೆ ಮೀರಿದ ಆ ಕ್ಯಾತೆ ‘ಪತ್ರಕರ್ತನ’ ಬಗ್ಗೆಯೂ ಎಷ್ಟು ನಿಷ್ಠೂರತೆ ಇಂದ ವ್ಯವಹರಿಸಿದ್ದೀರಿ? ಖುಷಿಯಾಯಿತು. ಬರಹಗಾರ ಅಂದರೇ ನನ್ನ ಅಭಿಪ್ರಾಯದಲ್ಲಿ ಎಲ್ಲರೊಡನಿದ್ದೂ ತನ್ನದೇ ಆದ ಸ್ವಂತಿಕೆ ಮತ್ತು ಅಭಿಪ್ರಾಯ ಹೊಂದಿದವನು. ನಿಮ್ಮ ಹಾಗೆ!
ನೀವು ಅಣ್ಣಾವ್ರನ್ನ, ವಿಷ್ಣು ಸಾರ್, ಅಂಬರೀಶ್, ಪುನೀತ್ ಇವರನೆಲ್ಲಾ ಮಾನವೀಯತೆಯ ನೆಲೆಗಟ್ಟಿನಲ್ಲಿ ನೋಡಿರುವುದು ಅವರ ಚಿತ್ರಗಳಿಗೆ ಒಳ್ಳೊಳ್ಳೆಯ ಹಾಡುಗಳನ್ನ ಬರೆದರೂ ಯಾವುದನ್ನೂ “taken for granted” ಮಾಡಿಕೊಳ್ಳದೇ ಇರುವುದು ಅದರಲ್ಲೂ ಇಂದಿನ “entitlement” ಜಗತ್ತಿನಲ್ಲಿ ಸ್ವಲ್ಪ ಅಪರೂಪ. ಇಷ್ಟೇ ಅಲ್ಲದೆ ಸಿನಿಮಾ ನಿರ್ದೇಶನ ಮಾಡಿ, ನಿರ್ಮಾಣ ಮಾಡಿ ಅದರ ಜೊತೆಯಲ್ಲಿಯೇ ಸಮಾಜಕ್ಕೆ ಒಳಿತುಮಾಡುವ ಕೆಲಸಗಳನ್ನೂ ಕೂಡ ಮಾಡುತ್ತಿರುವುದು ಅನುಕರಣೀಯ.
ಒಟ್ಟಿನಲ್ಲಿ “ your book was a breezy yet beautiful read !” ಇನ್ನಷ್ಟು ಮತ್ತಷ್ಟು ಬರೆಯಿರಿ. ತಾಯಿ ಶಾರದೆಯ ಇಂಬು ನಿಮ್ಮ ಪೆನ್ನಿನ ಶಾಹಿಯ ಕಣ ಕಣದಲ್ಲಿ ಹರಿಯುತ್ತಲಿರಲಿ ….ಶೃಂಗೇರಿಯ ತುಂಗೆಯಂತೆ!

Comments
Post a Comment