Skip to main content

Kaaju biscuit!

 

#  ಕಾಜು ಬಿಸ್ಕೆಟ್ #


ಕಿರಣ್ ನಿಮ್ಮ ಕಥಾ ಸಂಕಲನದ ಮೂಲ ದ್ರವ ಹುಡುಕಾಟ ತಾನೇ ? ಬಹುಷ ನಿಮ್ಮ ಬದುಕಿನ ಹುಡುಕಾಟವೇ ಇಲ್ಲಿ ನವಿರಾದ ಕಥೆಗಳಾಗಿ ಹೊಮ್ಮಿರಬೇಕು ಅಲ್ಲವೇ? ನಿಮ್ಮ ಕಥೆಗಳ ವಸ್ತುವಿನ ಅದನ್ನು ಪ್ರಸ್ತುತಪಡಿಸುವ ಹಾದಿಯಲ್ಲೆಲ್ಲಾ ನನಗೆ ಹೊರಗಿನಿಂದ ನಿಂತು ಕಥೆ ಹೇಳುವ ಅದರ ಮೂಲಕ ಕಥೆಗಳನ್ನ “ to let it be ” ಆಗಿಸುವ ನಿಮ್ಮ ಜಾಣ್ಮೆ ಅಥವಾ ವ್ಯಕ್ತಿತ್ವ ಕಾಣಿಸುತ್ತದೆ. ನಿಮ್ಮ ಆಸುಪಾಸು ಬಂದರೆ ನಾವೂ ಕಥೆಯಾಗುತ್ತೇವೆನೋ ಎನ್ನಿಸುವಷ್ಟು ಸರಳ ಮತ್ತು ಸೂಕ್ಷ್ಮ ಕಥೆಗಳು ನಿಮ್ಮವು. 

ಕಥೆಗಾರನಿಗೆ ತನ್ನ ಮತ್ತು ಸುತ್ತಮುತ್ತಲಿನ ಬದುಕಿನಲ್ಲೇ ವಸ್ತುಗಳು ಸಿಕ್ಕರೂ ಅದರ ಜಿಜ್ಞಾಸೆ ಮಾತ್ರ ಅವನಿಗೇ ಸ್ವಂತದ್ದು. ಅದು ಕಥೆಗಳಿಗೆ ಸಕಾರಣವಾಗಿ ದಕ್ಕಿದರೆ ಅದು ಕಥೆಯ ಓದುಗರ ಪುಣ್ಯ, ಅದು “ಇಲ್ಲಿ ದಾವಣಗೆರೆಯವರು ಇದ್ದಾರ? , 21 ನೇ ಕ್ರೋಮೋಸೋಮು, ಕೊಲೆ, ಅಪ್ಪ ಸೈಕಲ್ ಕಲಿಸಲಿಲ್ಲ “ ಕಥೆಗಳಲ್ಲಿ ವ್ಯಕ್ತವಾದರೆ……ಸಮಾಜದ ಮೇಲಿನ ಒಂದಷ್ಟು ಅಸಹನೆ “ಪ್ರತಿಮೆ, ಕಾಣೆಯಾದವರು, ಕಾಜು ಬಿಸ್ಕೇಟ್, ಶ್ರೀಧರ ನನಗೆ ಚೆನ್ನಾಗಿ ಗೊತ್ತು” ಕಥೆಗಳಲ್ಲಿ ವ್ಯಕ್ತವಾಗಿದೆ. ಅದರ ಜೊತೆಗೇ ಬೇರೆಯವರ ಚರ್ಮ, ದೇಹ ಮನಸಿನಲ್ಲಿ ಹೊಕ್ಕು ಅರಿವ ವಿಷಯಗಳು “ ಪರಕೀಯ, ಒಂದು ಮಧ್ಯಾಹ್ನ, ಎಂಟನೆಯ ದಿನ, ಅವರು ಮತ್ತೆ ಬರುತ್ತಾರೆ” ಎಂಬ ಕಥೆಯಲ್ಲಿ ಸಂಭವಿಸಿದೆ. ಒಟ್ಟಿನಲ್ಲಿ ಸ್ವಂತದ್ದು, ಅನುಭವಕ್ಕೆ ಬಂದಿದ್ದು, ಜಿಜ್ಞಾಸೆಗೆ ಏಟುಕಿದ್ದು/ ಏಟುಕದಿದ್ದದ್ದು ಎಂದು ಇಲ್ಲಿನ ಕಥೆಗಳನ್ನು ನಾನು ನನ್ನ ಮಟ್ಟಿಗೆ ಅರ್ಥಮಾಡಿಕೊಂಡಿದ್ದೇನೆ. 

ಇಲ್ಲಿನ ಕಥೆಗಳು ಅವುಗಳ ಸರಳತೆ, ಮನುಷ್ಯ ಪ್ರೀತಿ, ನೇರಾರ್ಥ, ಗೂಢಾರ್ಥ, ಕಥಾ ವಾಚಿಕೆ, ಅಪ್ತತೆಯಿಂದ ನನಗೆ ಹತ್ತಿರವಾದವು. ಗಹನವಾದದ್ದೆಲ್ಲ ಶ್ರೇಷ್ಠವಾಗಿರಬೇಕಿಲ್ಲ ಹಾಗೆಯೇ ಸರಳವಾದದ್ದು ಶ್ರೇಷ್ಠ ಅಲ್ಲದ್ದಲ್ಲ ಎಂಬ ಮಾತು ನಿಮ್ಮ ಕಥೆಗಳನ್ನು ಓದಿದಮೇಲೆ ನನಗೆ ಮತ್ತೆ ಗಟ್ಟಿ ಆಯಿತು. 

ಈ ಕಥೆಗಳನ್ನ ಹೆಚ್ಚೆಚ್ಚು ಜನ ಓದುವಂತಾಗಲಿ ಮತ್ತು ಅವರೂ ನಿಮ್ಮ ಜಗತ್ತಿನಲ್ಲಿ ಪಾಲುದಾರರಾಗಲಿ ಆದರ ಮೂಲಕ ಈ ಕಥಾ ಪಾತ್ರಗಳ ಅನುಭವವನ್ನ ಪಡೆಯಲಿ ಎಂದು ಆಶಿಸುವೆ.

ಕಥೆಗಳನ್ನು ಬರೆದದ್ದಲ್ಲದೆ ಅದನ್ನು ನೀವೇ ಪ್ರಕಟಿಸಿ, ಜನರ ಬಳಿಗೆ ಕೊಂಡು ಹೋಗಿ ತಲುಪಿಸಿದ್ದನೂ ( ಬಾ ಗುರು ಬುಕ್ ತಗೋ ತಂಡದ ಜೊತೆಗೆ) ನಿಮ್ಮ ಪ್ರೊಫೈಲ್ ನಲ್ಲಿ ಹೆಮ್ಮೆಯಿಂದ ಬರೆದುಕೊಂಡ “ stay at home dad “ ಎಂಬ ವಿಚಾರವನ್ನೂ ಮರೆಯದೆ ಇಲ್ಲಿ ನೆನೆಯುತ್ತೇನೆ. ಕಥೆ ಹುಟ್ಟಲು ಇವು ಬುನಾದಿ ಎಂಬುದು ನಿಮ್ಮಂತೆ ಕಥೆ ಕವಿತೆ ಬರೆವ ನನಗೂ…..


ಇಂತಿ ನಿಮ್ಮ ವಿಶ್ವಾಸಿ 

ದರ್ಶನ ಜಯಣ್ಣ

Comments

Popular posts from this blog

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ