# ಕಾಜು ಬಿಸ್ಕೆಟ್ #
ಕಿರಣ್ ನಿಮ್ಮ ಕಥಾ ಸಂಕಲನದ ಮೂಲ ದ್ರವ ಹುಡುಕಾಟ ತಾನೇ ? ಬಹುಷ ನಿಮ್ಮ ಬದುಕಿನ ಹುಡುಕಾಟವೇ ಇಲ್ಲಿ ನವಿರಾದ ಕಥೆಗಳಾಗಿ ಹೊಮ್ಮಿರಬೇಕು ಅಲ್ಲವೇ? ನಿಮ್ಮ ಕಥೆಗಳ ವಸ್ತುವಿನ ಅದನ್ನು ಪ್ರಸ್ತುತಪಡಿಸುವ ಹಾದಿಯಲ್ಲೆಲ್ಲಾ ನನಗೆ ಹೊರಗಿನಿಂದ ನಿಂತು ಕಥೆ ಹೇಳುವ ಅದರ ಮೂಲಕ ಕಥೆಗಳನ್ನ “ to let it be ” ಆಗಿಸುವ ನಿಮ್ಮ ಜಾಣ್ಮೆ ಅಥವಾ ವ್ಯಕ್ತಿತ್ವ ಕಾಣಿಸುತ್ತದೆ. ನಿಮ್ಮ ಆಸುಪಾಸು ಬಂದರೆ ನಾವೂ ಕಥೆಯಾಗುತ್ತೇವೆನೋ ಎನ್ನಿಸುವಷ್ಟು ಸರಳ ಮತ್ತು ಸೂಕ್ಷ್ಮ ಕಥೆಗಳು ನಿಮ್ಮವು.
ಕಥೆಗಾರನಿಗೆ ತನ್ನ ಮತ್ತು ಸುತ್ತಮುತ್ತಲಿನ ಬದುಕಿನಲ್ಲೇ ವಸ್ತುಗಳು ಸಿಕ್ಕರೂ ಅದರ ಜಿಜ್ಞಾಸೆ ಮಾತ್ರ ಅವನಿಗೇ ಸ್ವಂತದ್ದು. ಅದು ಕಥೆಗಳಿಗೆ ಸಕಾರಣವಾಗಿ ದಕ್ಕಿದರೆ ಅದು ಕಥೆಯ ಓದುಗರ ಪುಣ್ಯ, ಅದು “ಇಲ್ಲಿ ದಾವಣಗೆರೆಯವರು ಇದ್ದಾರ? , 21 ನೇ ಕ್ರೋಮೋಸೋಮು, ಕೊಲೆ, ಅಪ್ಪ ಸೈಕಲ್ ಕಲಿಸಲಿಲ್ಲ “ ಕಥೆಗಳಲ್ಲಿ ವ್ಯಕ್ತವಾದರೆ……ಸಮಾಜದ ಮೇಲಿನ ಒಂದಷ್ಟು ಅಸಹನೆ “ಪ್ರತಿಮೆ, ಕಾಣೆಯಾದವರು, ಕಾಜು ಬಿಸ್ಕೇಟ್, ಶ್ರೀಧರ ನನಗೆ ಚೆನ್ನಾಗಿ ಗೊತ್ತು” ಕಥೆಗಳಲ್ಲಿ ವ್ಯಕ್ತವಾಗಿದೆ. ಅದರ ಜೊತೆಗೇ ಬೇರೆಯವರ ಚರ್ಮ, ದೇಹ ಮನಸಿನಲ್ಲಿ ಹೊಕ್ಕು ಅರಿವ ವಿಷಯಗಳು “ ಪರಕೀಯ, ಒಂದು ಮಧ್ಯಾಹ್ನ, ಎಂಟನೆಯ ದಿನ, ಅವರು ಮತ್ತೆ ಬರುತ್ತಾರೆ” ಎಂಬ ಕಥೆಯಲ್ಲಿ ಸಂಭವಿಸಿದೆ. ಒಟ್ಟಿನಲ್ಲಿ ಸ್ವಂತದ್ದು, ಅನುಭವಕ್ಕೆ ಬಂದಿದ್ದು, ಜಿಜ್ಞಾಸೆಗೆ ಏಟುಕಿದ್ದು/ ಏಟುಕದಿದ್ದದ್ದು ಎಂದು ಇಲ್ಲಿನ ಕಥೆಗಳನ್ನು ನಾನು ನನ್ನ ಮಟ್ಟಿಗೆ ಅರ್ಥಮಾಡಿಕೊಂಡಿದ್ದೇನೆ.
ಇಲ್ಲಿನ ಕಥೆಗಳು ಅವುಗಳ ಸರಳತೆ, ಮನುಷ್ಯ ಪ್ರೀತಿ, ನೇರಾರ್ಥ, ಗೂಢಾರ್ಥ, ಕಥಾ ವಾಚಿಕೆ, ಅಪ್ತತೆಯಿಂದ ನನಗೆ ಹತ್ತಿರವಾದವು. ಗಹನವಾದದ್ದೆಲ್ಲ ಶ್ರೇಷ್ಠವಾಗಿರಬೇಕಿಲ್ಲ ಹಾಗೆಯೇ ಸರಳವಾದದ್ದು ಶ್ರೇಷ್ಠ ಅಲ್ಲದ್ದಲ್ಲ ಎಂಬ ಮಾತು ನಿಮ್ಮ ಕಥೆಗಳನ್ನು ಓದಿದಮೇಲೆ ನನಗೆ ಮತ್ತೆ ಗಟ್ಟಿ ಆಯಿತು.
ಈ ಕಥೆಗಳನ್ನ ಹೆಚ್ಚೆಚ್ಚು ಜನ ಓದುವಂತಾಗಲಿ ಮತ್ತು ಅವರೂ ನಿಮ್ಮ ಜಗತ್ತಿನಲ್ಲಿ ಪಾಲುದಾರರಾಗಲಿ ಆದರ ಮೂಲಕ ಈ ಕಥಾ ಪಾತ್ರಗಳ ಅನುಭವವನ್ನ ಪಡೆಯಲಿ ಎಂದು ಆಶಿಸುವೆ.
ಕಥೆಗಳನ್ನು ಬರೆದದ್ದಲ್ಲದೆ ಅದನ್ನು ನೀವೇ ಪ್ರಕಟಿಸಿ, ಜನರ ಬಳಿಗೆ ಕೊಂಡು ಹೋಗಿ ತಲುಪಿಸಿದ್ದನೂ ( ಬಾ ಗುರು ಬುಕ್ ತಗೋ ತಂಡದ ಜೊತೆಗೆ) ನಿಮ್ಮ ಪ್ರೊಫೈಲ್ ನಲ್ಲಿ ಹೆಮ್ಮೆಯಿಂದ ಬರೆದುಕೊಂಡ “ stay at home dad “ ಎಂಬ ವಿಚಾರವನ್ನೂ ಮರೆಯದೆ ಇಲ್ಲಿ ನೆನೆಯುತ್ತೇನೆ. ಕಥೆ ಹುಟ್ಟಲು ಇವು ಬುನಾದಿ ಎಂಬುದು ನಿಮ್ಮಂತೆ ಕಥೆ ಕವಿತೆ ಬರೆವ ನನಗೂ…..
ಇಂತಿ ನಿಮ್ಮ ವಿಶ್ವಾಸಿ
ದರ್ಶನ ಜಯಣ್ಣ

Comments
Post a Comment