ದೇವರ ತೇರಿಗೂ ಗಾಲಿಗಳು ಬೇಕು…
“ಮರದೊಳಗಡಗಿದ ಬೆಂಕಿಯಂತೆ
ಎಲ್ಲೋ ಅಡಗಿದೆ ಬೇಸರ
ಏನೋ ತೀಡಲು ಏನೋ ಕಾಡಲು
ಹೊತ್ತಿ ಉರಿವುದು ಕಾತರ “ ….ಗೋ ಕೃಷ್ಣ ಅಡಿಗ
ಭವ್ಯರ ಕವನಗಳನ್ನ ನಾನು ಮೊದಲು ಓದಿದ್ದು ಅವಧಿ ತಾಣದಲ್ಲಿ. ಬಹುಶ ಬುದ್ಧನ ಬಗ್ಗೆ ಅನ್ನಿಸುತ್ತದೆ.
ಅವರು ಬುದ್ಧನನ್ನ reimagine ಮಾಡಿದ್ದರು. ನಂತರ ಅವರ ನೇರ ವಾಚನವನ್ನ ಸುಚಿತ್ರದಲ್ಲಿ ಕೇಳಿದ್ದು.
ಅವತ್ತು ಜಿ ಏನ್ ಮೋಹನ್ ಸರ್ ಮತ್ತು ಉಮಾ ಮುಕುಂದ ಅವರೂ ಕೂಡಾ ತಮ್ಮ ತಮ್ಮ ಕವನಗಳನ್ನ ಓದಿದ್ದರು. ಭವ್ಯ ನನಗೆ ನಮ್ಮಂತೆ ಅನ್ನಿಸಿದ್ದರು…ಅಂದರೆ ಈಗೀಗ ಕಾವ್ಯ ಸಹವಾಸದಲ್ಲಿರುವವರು “ ಬರೆದ ಸಾಲಿಗೆ, ಹೊಳೆದ ತಾರೆಗೆ ನಿಬ್ಬೆರಗಾಗೋ ರೀತಿ!” ಒಂದೇ ಆಗಿತ್ತು.
ಅವತ್ತು ಅವರು ತಮ್ಮಲ್ಲಿ ಕವಿತೆ ಹುಟ್ಟುವಿಕೆಯ ಕಿಡಿಯ ಬಗ್ಗೆ ಹೇಳಿಕೊಂಡಿದ್ದರು. ಅವರು ಕವಿತೆಯನ್ನ ಬರೆದಷ್ಟೇ ಚೆನ್ನಾಗಿ ಓದುತ್ತಾರೆ ಅನ್ನಿಸಿತು. ಅವೆಲ್ಲವನ್ನ ಪುಸ್ತಕ ರೂಪದಲ್ಲಿ ತರಲು ಸಾಕಷ್ಟು ಸಮಯ ಕೊಂಡರು ಅನ್ನಿಸಿದರೂ, ಈ ಸಂಕಲನದ ಪರಿಚಯದ ಮಾತುಗಳು ಹೊಸದಾಗಿ ಬರೆಯುವವರಿಗೆ ತೋರುಬೆರಳಿನಂತಿದೆ.
ಕೆ ವೈ ಏನ್ ಅವರ ಸೊಗಸಾದ ಪ್ರವೇಶಿಕೆ ಭವ್ಯರನ್ನು, ನಮ್ಮನ್ನು ಕಾವ್ಯದ ಮತ್ತು ಬರೆವಣಿಗೆಯ ದಾರಿಯ ಹಳ್ಳ ದಿಬ್ಬಗಳ ಬಗ್ಗೆ ಎಚ್ಚರಿಸುತ್ತದೆ. ಏನನ್ನು ಕಾಣಬೇಕು ಎಂಬುದನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ಆರತಿ ಹೆಚ್ ಏನ್ ರವರ ಸಾಲುಗಳು ಸಭ್ಯತೆಯನ್ನು ಮೀರದ ಭವ್ಯರ ಕಾವ್ಯದ ಬಗ್ಗೆ ಮೀರಬಾರದ ಅಗತ್ಯದ ಬಗ್ಗೆ ತಿಳಿಸಿಕೊಟ್ಟರೆ ಹೆಚ್ ಆರ್ ಸುಜಾತ ಮ್ಯಾಡಂ ಅತ್ಯಂತ ಸರಳವಾಗಿ ಹೊಸದಾಗಿ ಕವಿತೆ ಬರೆವವರನ್ನ ನಡೆಯಲು, ಒಡಲು ಕಲಿಯುತ್ತಿರುವ ಮಕ್ಕಳಿಗೆ ಹೋಲಿಸಿ, ಅದು ಹೇಗೆ ದೊಡ್ಡವರು ಅದನ್ನ ನೋಡಿ ಸಂಭ್ರಮಿಸುತ್ತಾರೆ ಎಂಬ ಹೃದ್ಯ ವಿಮರ್ಶೆ ಮಾಡಿದ್ದಾರೆ. ಆದರೆ ಅವರೇ ಮುಂದುವರೆದು ಬೆಳೆಯುತ್ತಾ ಬೆಳೆಯುತಾ ಹೇಗೆ ಹೆಜ್ಜೆ, ಮಾತು, ನಡಾವಳಿಯನ್ನ ತಿದ್ದಿಕೊಂಡು ಮುಂದೆ ಸಾಕಬೇಕು ಅದೇ ರೀತಿ ಕಾವ್ಯವೂ ಕೂಡಾ ಬಾಗಿ ಮಾಗಿ ಸಾಗಬೇಕು ಎಂದು ತಿಳಿಸಿದ್ದಾರೆ.
ನನ್ನ ಪ್ರಕಾರ ಇವರೆಲ್ಲರೂ ಭವ್ಯರ ಕಾವ್ಯದ ಶಕ್ತಿಯನ್ನು ಮಿತಿಯನ್ನು ಗಮನಿಸಿಯೂ ಅವರನ್ನು ಅಟ್ಟಕ್ಕೇರಿಸದೆ ಸೂಕ್ತ ಮಾರ್ಗ ಹೇಳಿಕೊಟ್ಟಿದ್ದಾರೆ, ಅದು ನಮಗೂ ಅನ್ವಯವಾಗುತ್ತದೆ.
ಇಲ್ಲಿನ ಕವಿತೆಗಳಲ್ಲಿ ಭವ್ಯ ಹದಿ ಹರೆಯದವರನ್ನು ಯಾವತ್ತೂ ಕಾಡುವ ಪ್ರೀತಿ, ದೇವರು, ಅಸಮಾನತೆ, ಅಸಂಗತತೆ, new found ಹೊಳಹುಗಳು, ಅಮೂರ್ತ ಭಾವ, ಸುತ್ತ ಮುತ್ತಲಿನ ವಿಷಾದ, ಒಳ ಹೊರಗು ಮುಂತಾದ ವಿಷಯಗಳ ಬಗ್ಗೆ ಅತ್ಯಂತ ತಾಜಾ ಆದ ಕವಿತೆಗಳನ್ನು ಬರೆದಿದ್ದಾರೆ. ಒಂದಷ್ಟು ಕಡೆ ವಿಷಯಗಳು ಪುನರಾವರ್ತನೆಯಾಗಿದೆ ಎನ್ನುವುದನ್ನು ಪಕ್ಕಕ್ಕೆ ಇಟ್ಟು ಹೊಸ ಹೊಸ ಸಾಲುಗಳನ್ನು ಸವಿಯಬೇಕಿದೆ….ನಾನು ಬರೆದಂತೇ ಅವರೂ ಕೂಡ ಹೆಚ್ಚು “ವಾಚ್ಯ” ವಾಗಿ ಬರೆದಿರುವರು. “ ಸೂಚ್ಯ” ದಲ್ಲಿ ಎಲ್ಲ ಹೇಳಲಿಕ್ಕೆ ಸಾಕಷ್ಟು ಅನುಭವ ಬೇಕು, ಬಹುಶ ನಾವಿನ್ನೂ ಮಾಗಬೇಕು. ಆದರೆ ಅವರ ಒಂದಷ್ಟು ಸಾಲುಗಳು ಅದರಲ್ಲೂ ಪ್ರೀತಿ- ವಿರಹದ ಬಗ್ಗೆ ಬರೆದಾಗ ಅದು ಎಲ್ಲೂ “ ಸಭ್ಯತೆಯ ಎಲ್ಲೆ ಮೀರಿಲ್ಲ” ಮತ್ತು ಈ ಮಾತನ್ನ ಆರತಿಯವರು ಶುರುವಿನಲ್ಲೇ ಹೇಳಿದ್ದಾರೆ. ನನಗೆ ಇಷ್ಟವಾದ ಹಲವು ಪದ್ಯಗಳಲ್ಲಿ ಕೆಲವನ್ನು ಸಾಲುಗಟ್ಟಿದ್ದೇನೆ…..
“ ಹಠವೋ ಆಸೆಯೋ ತೂತು ತಪ್ಪಲೆಯಲ್ಲಿ
ಅದೆಷ್ಟು ತುಂಬಿದ ಕನಸುಗಳು!
ಜಾರುವಷ್ಟು ಹೊತ್ತೂ ಹರುಷ ಅವಳದು
ಒದ್ದೆ ಕಣ್ಣು ಒದ್ದೆ ಪಾತ್ರೆ “
“ ಬೆಳಕ ಕಾಣಲು ಯತ್ನಗಳಿರಬೇಕು
ಸಾಗಲು ದೇವರ ತೇರಿಗೂ ಗಾಲಿಗಳು ಬೇಕು!”
“ಇಬ್ಬರಿಗೂ ನಿರಾಯಾಸದ ಕೆಲಸವಾದರೂ
ಭೇಟಿಯಲ್ಲಿ ಮಾತ್ರ ಅವನದು ನಡುಗುವ ಕೈಗಳು
ಅವಳದು ಒಣಗಿದ ಗಂಟಲು “
“ ನೀ ಬಾರದ ಭಾರದ ಸತ್ಯ ಅನೃತವಾಗಲಿ
ಕೊರಳ ಸೀಳುತಿರುವ ಗರಳ ನಿತ್ಯ ಅಮೃತವಾಗಲಿ “
ಈ ಎಲ್ಲ ಕವಿತೆಗಳೂ ಆರಾಮವಾಗಿ, ಧಾವಂತವಿರದೆ ಸಾಗಿವೆ ಮತ್ತು ಅದೇ ಅನುಭೂತಿಯನ್ನು ಓದಿದವರಿಗೂ ದಾಟಿಸುತ್ತವೆ. ಪುಸ್ತಕದ ಮುಖಪುಟ ವಿನ್ಯಾಸವೇ ಒಂದು ವಿಶಿಷ್ಟವಾದ ಕವಿತೆಯಂತಿದೆ, ಬಣ್ಣ soothing ಆಗಿಯೂ ಪಂಚ ಭೂತಗಳು (ಸೂರ್ಯ, ಚಂದ್ರ, ಮೋಡ, ಮರ, ಕಲ್ಲು) ಗಾಲಿಯಾಗಿಯೂ ಇವೆ ಎಂದೆನಿಸುವಹಾಗೆ….

Comments
Post a Comment