Tejo-Tungabhadra
ಈ ಪುಸ್ತಕವನ್ನ ಎಷ್ಟು ಲೇಟ್ ಆಗಿ ಓದಿದೆಯೆಂದರೆ ಅಷ್ಟರಲ್ಲಿ ಇದು ಹತ್ತಾರು ಮುದ್ರಣ ಕಂಡಿತ್ತು. ಒಂದು ಬಾರಿ ಅರ್ಧ ಓದಿ ಬಿಟ್ಟು ಮತ್ತೆ ಮೊದಲಿನಿಂದ ಪೂರ್ತ ಓದಿದೆ. ವಸುಧೇಂದ್ರರ ಮಿಕ್ಕ ಕಥೆಗಳಲ್ಲಿ, ನೀಲ್ಗತೆಗಳಲ್ಲಿ ಇದ್ದಂತಲ್ಲ ಇಲ್ಲಿಯ ಭಾಷೆ…this was honey dew! ಬಳ್ಳಾರಿಯ ಬಿಸಿ, ಗಡಸುತನ ಇಲ್ಲಿ ತುಂಗಭದ್ರೆಯಲ್ಲೂ ಇಲ್ಲ, ತೇಜೋದಲ್ಲಂತೂ ಭಾಷೆ ಅತ್ಯಂತ ಮೃದು, ಥೇಟ್ ಬೆಲ್ಲ ಮತ್ತು ಗ್ಯಾಬ್ರಿಯಲ್ನ ನಿಷ್ಕಲ್ಮಶ ಪ್ರೀತಿಯ ಹಾಗೆ.
ಐತಿಹಾಸಿಕ ಫಿಕ್ಷನ್ ಬರೆಯುವಾಗಿನ ತಯಾರಿ ಯಾವ ರೀತಿ ಇರುತ್ತದೆ ಇರಬೇಕು ಎಂಬುದು ನನಗೆ ತಿಳಿದಿಲ್ಲ. ಇದು ಕತ್ತಲಲ್ಲಿ ಕರಿಯಾನೆಯನ್ನು ಕುರುಡರು ಮುಟ್ಟಿದ ಹಾಗೆ ಎಂಬುದು ನನ್ನ ಅನಿಸಿಕೆ. ಇದಕ್ಕೆ ಇಂಬು ಕೊಡುವಂತೆ ಜಿ ಎಸ್ ಎಸ್ ರವರ “ ಚರಿತ್ರೆ ಎಂದರೆ ಅದೊಂದು ಮಬ್ಬು ಕವಿದ ಸುರಂಗ, ಪಂಜು ಹಿಡಿದು ಒಳ ನಡೆದರೆ ಶತಮಾನಗಳ ನೋವು!” ಎಂಬ ಮಾತುಗಳು ಪುಷ್ಟಿಕೊಡುತ್ತವೆ.
ಇಲ್ಲಿ ವಸುಧೇಂದ್ರರು ಐತಿಹಾಸಿಕ ಗ್ರಂಥಗಳನ್ನ ಮತ್ತು ಅದಕ್ಕಿಂತಾ ಮುಖ್ಯವಾಗಿ ತಮ್ಮ ಇಮ್ಯಾಜಿನೇಶನ್ ಅನ್ನ ಪಂಜಿನಂತೆ ಹಿಡಿದಿದ್ದಾರೆ. ‘ಲೆಂಕತನ’ ಪದ್ಧತಿ ಇಲ್ಲಿ ಬರಿಯ ಆಚರಣೆಯಲ್ಲ ಬದಲಾಗಿ ಇಡೀ ಕಥೆಯ, ಶ್ರೀ ಕೃಷ್ಣದೇವರಾಯರ ವ್ಯಥೆಯ, ಸತ್ತವನ ಚಿತೆಯ ಭಾಗವಾಗಿದೆ. ಹಡಗುಗಳಲ್ಲಿ ಎಂದಿಗೂ ಉಪದ್ರ ಮಾಡುವ ಇಲಿ ಹೆಗ್ಗಣಗಳು ಪಾತ್ರವಾಗಿ, ತಾಪತ್ರಯವಾಗಿ ಕಡೆಗೆ ಬದುಕು ಸಾವಿನ ನಡುವೆಯ hanging thread ಆಗಿಯೂ ಕಾಣಿಸಿವೆ. ಪ್ರೀತಿ ಇಲ್ಲಿ ಯಾವ ನೀರಿನಲ್ಲಿಯೂ ನಿರ್ಭಿಡೆಯಿಂದ ಈಜುವ ಸ್ವಚಂಧ ಮೀನುಗಳಾಗಿ ಮೈದಳೆದಿದೆ. ಜೋಗಮ್ಮರಿಲ್ಲಿ ತಾಯಿಯರಾಗಿ, ಕಾಯುವವರಾಗಿ, ಆತ್ಮದ ಬಂಧುಗಳಾಗಿ ಕಾಣಿಸಿದ್ದಾರೆ.
ಮೇಲಿನವೆಲ್ಲಾ ಫಿಕ್ಷನ್ನ ಭಾಗವಾದರೆ, ಆಳುವವರು, ಅವರು ಸ್ಪೇನಿನ ರಾಣಿ ಇಸಬೆಲ್ಲ ಆಗಲಿ, ಕೃಷ್ಣದೇವರಾಯರೇ ಆಗಲಿ, ಪೋರ್ಚುಗೀಸ್ನ್ ಆಲ್ಬುಕರ್ಕೆ ಆಗಲಿ, ನಮ್ಮ ಇಂದಿನ ನಾಯಕರುಗಳಂತೆಯೇ ರಕ್ತ ಪಿಪಾಸುಗಳೂ, ಅಧಿಕಾರಶಾಯಿಗಳೂ, ಎಲ್ಲ ನೆಟ್ಟಗಿದ್ದರೆ ಜನಾನುರಾಗಿಗಳೂ, ಜೊತೆಗೆ ಸ್ವಲ್ಪ ಧರ್ಮಾಂಧರೂ ಆಗಿ ಕಾಣಿಸಿದ್ದಾರೆ. ಇತಿಹಾಸದಲ್ಲಿ ಬರುವ ಕಥೆಯನ್ನು ಹಾಗೆಯೇ ಬಟ್ಟಿ ಇಳಿಸದೇ ಕಾರ್ಯಕಾರಣ ಸಂಬಂಧವನ್ನು ಕಲ್ಪಿಸಿ, ನಯವಾಗಿ ಸೃಷ್ಟಿಸಿ, ಪ್ರಸ್ತುತಪಡಿಸಿರುವುದು ಚೇತೋಹಾರಿಯಾಗಿದೆ.
ಈಗ ಇತಿಹಾಸದ ಸತ್ಯಾಸತ್ಯತೆಯ ಕಡೆಗೆ ಬರುವುದಾದರೆ “ ಮಬ್ಬು ಕವಿದ ಸುರಂಗ “ ವನ್ನು ನೆನಪು ಮಾಡಿಕೊಳ್ಳಲೇ ಬೇಕು. ಮುಸ್ಲಿಂ ಆಳ್ವಿಕೆಯಲ್ಲಿ, ಪೋರ್ಚುಗೀಸರ ರಾಜ್ಯಭಾರದಲ್ಲಿ, ಸ್ಪೇನ್ನ ಇಸಬೆಲ್ಲಾಳ ಆಳ್ವಿಕೆಯಲ್ಲಿ ಅವರವರ ಧರ್ಮ, ದೇವರು, ಜನಗಳನ್ನು ಪುರಸ್ಕರಿಸಿ ಬೇರೆಯವರನ್ನು ಬಲಿಕೊಟ್ಟಿರುವ ಪ್ರಸಂಗಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದರೂ ಅದನ್ನು ಫಿಕ್ಷನ್ ನಲ್ಲಿ ತಂದೊಡನೆ ಅದರ ಸತ್ಯ, ಉದ್ದೇಶ ಮತ್ತು ಪ್ರಸ್ತಾವನೆಯ ಹಿಂದಿನ ಉದ್ದೇಶ ಪ್ರಶ್ನಿಸಲ್ಪಡುತ್ತದೆ ಮತ್ತು ಪಡಬೇಕು ಕೂಡ!
ಈ ಕಥೆಯ ಬಹುಮುಖ್ಯವಾದ ಸಮಯದಲ್ಲಿ ನಾಯಕಿ ಸರಿ ತಪ್ಪು ಧರ್ಮ ಕರ್ಮಗಳ ಸುಳಿಯಲ್ಲಿ ಸಿಲುಕಿರುವಾಗ ಪುರಂದರದಾಸರು ಬರುವುದು ಬಂದು “ಲೊಳಲೊಟ್ಟೆ“ ಹಾಡನ್ನು ಹಾಡಿ ಅವಳ ಮನಸಿನ ತೊಳಲಾಟಕ್ಕೆ ನಾಂದಿ ಹಾಡಿ ಆಕೆಯನ್ನ ಬಿಡುಗಡೆಗೊಳಿಸುವುದು ಫಿಕ್ಷನ್ ಪ್ರಾಕಾರದ ಬಲು ಬುದ್ಧಿವಂತ ನಡೆಯಾಗಿದೆ.
ಇತಿಹಾಸದ ಎಳೆಗಳನ್ನು, ಅದರಲ್ಲೂ ಜನಜೀವನದ ವಿವರಗಳನ್ನು, ಪ್ರಭುಗಳಿಂದ ಜನಗಳು ಏಗುವುದನ್ನು ಧರ್ಮ, ಪ್ರೀತಿ, ಮತಾಂಧತೆ, ಪದ್ಧತಿಗಳು, ರಾಜಸತ್ತೆ, ವರ್ಗ, ಲಂಪಟತೆ, ಸಹಾನುಭೂತಿ, ಜಾಗತೀಕರಣದ ಪರ್ವ, ಮತ್ಸರ, ಅಸಹಾಯಕತೆ, ದರ್ಪ ಎಲ್ಲವನ್ನೂ ತೇಜೋ- ತುಂಗಭದ್ರ ತನ್ನೊಳಗಿಟ್ಟುಕೊಂಡು ಹರಿದಿದೆ….
ಇಸಬೆಲ್ ರಾಣಿ ಸ್ಪೇನ್ನಲ್ಲಿ ಮುಸ್ಲಿಂ ಆಳ್ವಿಕೆ ಕೊನೆಗೊಂಡದ್ದರ ನೆನಪಿಗಾಗಿ ಮತ್ತು ಒತ್ತೆಯಾಳುಗಳಾಗಿದ್ದ ಕ್ರಿಶ್ಚಿಯನ್ಗಳನ್ನು ಬಿಡುಗಡೆಗೊಳಿಸಿದ ನೆನಪಿಗೆ ಒಂದು ಚರ್ಚ್ ಕಟ್ಟಿಸುತ್ತಾಳೆ, ಅದೂ ಸ್ಪೇನ್ ನ ಪ್ರಾಚೀನ ರಾಜಧಾನಿ ಟೋಲೆಡೋ ನಗರದಲ್ಲಿ, ನಾನಲ್ಲಿಗೆ ಭೇಟಿನೀಡಿದಾಗ ತೆಗೆದ ಫೋಟೋ ಇಲ್ಲಿದೆ. ಅದರ ಮೇಲಿರುವ ಕಬ್ಬಿಣದ ಸರಳುಗಳು ಕ್ರಿಶ್ಚಿಯನ್ ಗುಲಾಮರನ್ನು ಬಂಧಿಸಲು ಬಳಸಿದ್ದಂತೆ! ಈಗಲೂ ಅಲ್ಲಿ ಮುಸ್ಲಿಂ ಮತ್ತು ಯಹೂದಿಗಳ ಸಮುಚ್ಚಯಗಳಿವೆ.
ದರ್ಶನ್ ಜಯಣ್ಣ

Comments
Post a Comment