Skip to main content

ಎಂದೆಂದೂ ಮುಗಿಯದ ಯುದ್ಧ

 ಹಿರಿಯರಾದ ಜಗದೀಶ್ ಕೊಪ್ಪ ಅವರ ಅಂಕಣಗಳನ್ನ ನಾನು ಬಿಡದೆ ಓದುತ್ತೇನೆ. ಅತ್ಯಂತ ತಲಸ್ಪ್ರರ್ಶಿಯಾಗಿ, ವೈವಿಧ್ಯಮಯ ವಿಚಾರಗಳ ಬಗ್ಗೆ ಸರಳವಾಗಿ ಅವರು ಬರೆಯುತ್ತಾರೆ. ಅದು ಪರಿಸರದಿಂದ ಹಿಡಿದು, ಪಟಾಲಂನವರವರೆಗೆ, ಬುದ್ಧನಿಂದ ಹಿಡಿದು ನಕ್ಸಲ್ ಹೋರಾಟದವರೆಗೆ, ಗಾಂಧಿಯಿಂದ ಹಿಡಿದು ಬಂಡವಾಳ ಶಾಹಿಗಳವರೆಗೆ, ಸಬಲೀಕರಣದಿಂದ ಹಿಡಿದು ಸಂಗೀತದ ವರೆಗೆ ವಿಸ್ತಾರವಾಗಿರುತ್ತದೆ. ಕನ್ನಡ ಓದುಗರಿಗೆ ಅಥವಾ ಓದುಗರನ್ನು ಹೀಗೆ ನಾನಾ ವಿಚಾರಗಳ ಬಗ್ಗೆ ಎಜುಕೇಟ್ ಮಾಡಿದವರು ಕಡಿಮೆ ಅದರಲ್ಲಿ ನನಗೆ ಗೊತ್ತಿರುವವರು ಅನಂತ ಚಿನಿವಾರ, ನಾಗೇಶ್ ಹೆಗ್ಡೆ, ಶಿವಸುಂದರ್ ಮುಂತಾದವರು. 


ಇಷ್ಟೆಲ್ಲಾ ಹೇಳಲು ಮೊದಲಿಟ್ಟಿದ್ದು ನಾನು ತುಂಬಾ ದಿನದಿಂದ ಓದಬೇಕೆಂದುಕೊಂಡು ಇತ್ತೀಚಿಗೆ ಓದಿದ ಮುಗಿಸಿದ ನಕ್ಸಲ್ ಹೋರಾಟದ ಕುರಿತ ಅವರ “ ಎಂದೂ ಮುಗಿಯದ ಯುದ್ಧ”  ಎಂಬ ಪುಸ್ತಕ. ಇದಕ್ಕೆ ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿ ದೊರಕಿದ್ದು ಇದರ ಘನತೆಗೆ ಸಾಕ್ಷಿ. 

ಸಂಪೂರ್ಣವಾಗಿ ನಕ್ಸಲ್ ಇತಿಹಾಸಕ್ಕೆ ಅದರ ಬೆಳವಣಿಗೆಗೆ, ಅವಸಾನಕ್ಕೆ ಕಾರಣವಾದ, ಆಗುತ್ತಿರುವ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ಇಲ್ಲಿ ಕಾಣಬಹುದು. ಮುಖ್ಯವಾಗಿ ಮಧ್ಯ ಭಾರತದ ದಂಡಕಾರಣ್ಯ, ಸಂಯುಕ್ತ ಆಂಧ್ರ, ಬೆಂಗಾಳ, ಒರಿಸ್ಸಾ ಮತ್ತು ಕರ್ನಾಟಕಗಳಲ್ಲಿ ತಲೆ ಎತ್ತಿದ ಮತ್ತು ಅದಕ್ಕೆ ಕಾರಣವಾದ ವಿಷಯಗಳ ಬಗ್ಗೆ ಅಕೆಡೆಮಿಕ್ ಶಿಸ್ತಿನಿಂದ, ಚಿಕಿತ್ಸಕ ನೋಟದಿಂದ, ಪರಿಣಿತ ಪತ್ರಕರ್ತನ ಭಾಷೆಯಲ್ಲಿ ಸರಳವಾಗಿ ನಿರೂಪಣೆಗೊಂಡಿರುವ ಈ ಕೃತಿ ಸ್ವಂತ ಅನುಭವದ, ಅಗಾಧವಾದ ಇತರೆ ಪುಸ್ತಕಗಳ, ಅಂಕಣಗಳ ಓದಿನ ಪರಿಣಾಮವೆಂದು ತಿಳಿಯುತ್ತದೆ. 

ಇದೇ ಈ ವಿಷಯಗಳ ಆಳಕ್ಕಿಳಿಯಲು ಮತ್ತು ಮುಂದಿನ ಓದಿಗೆ ಸಹಕಾರಿ. ನನ್ನ ಜಿಲ್ಲೆಯ ಪಾವಗಡದ, ಮಲೆನಾಡಿನ ಹೆಬ್ರಿ ಮುಂತಾದ ಕಡೆಗಳಲ್ಲಿ ಆಗಾಗ ನಡೆಯುತ್ತಿದ್ದ ಚಟುವಟಿಕೆಗಳು ನಮಗೆ ದೂರದಿಂದಲೇ ತಿಳಿಯುತ್ತಿರುವಾಗ ಸಾಕೇತ್ ರಾಜನ್ನ ಮತ್ತು ಸಹಚರರ ಎನ್ಕೌಂಟರ್, ಗದ್ದರ್ ಬೆಂಗಳೂರಿಗೆ ಬರುವುದು, ಅದರ ಪ್ರಕ್ಷುಬ್ಧ ವಾತಾವರಣ, ನಂತರದ ದಿನಗಳಲ್ಲಿ ನಾನು ಮಂಗಳೂರಿನಲ್ಲಿದ್ದಾಗಿನ ನಾಲ್ಕು ವರ್ಷದ ಚಾರಣಗಳು ಮತ್ತು ಆಗೆಲ್ಲ ನಮಗೆ ಫೊರೆಸ್ಟ್ನವರಿಂದ ದೊರೆಯುತ್ತಿದ್ದ ಎಚ್ಚರಿಕೆಗಳು (ಹೆಬ್ರಿ, ಕೆಮ್ಮಣ್ಣುಗುಂಡಿ, ಹನುಮನಗುಂಡಿ ಮುಂತಾದ ಕಡೆಗಳಲ್ಲಿ), ಅರ್ಬನ್ ನಕ್ಸಲ್ ವಿವಾದ, ಹೆಚ್ಚು ಹೆಚ್ಚು ಓದಿದವರು ಆಕಡೆ ವಾಲಲ್ಪಟ್ಟಿದ್ದಕ್ಕೆ ಕಾರಣಗಳು, ರಾಜನ್ನ making history ಭಾಗ ೧ ಮತ್ತು ೨ ಇವೆಲ್ಲಾ ಕಾರಣ ಅನ್ನಬಹುದು. 

ಒಟ್ಟಿನಲ್ಲಿ ಜಗದೀಶ್ ಕೊಪ್ಪರವರು ಹೇಳುವಹಾಗೆ ಈಗಿನ ಸಂಘಟನೆಯ ಮುಖ್ಯಸ್ಥರ ಬಳಿ ಹಣವಿದೆ, ಅಸ್ತ್ರಗಳಿವೆ ಆದರೆ ಹೋರಾಟದ ಉದ್ದೇಶ, ಆದರ್ಶ, ತಿಳುವಳಿಕೆ ಒಂದೂ ಇಲ್ಲ ಅಥವಾ ಅದೆಲ್ಲ ಮುಂಚೆಯೂ ಇದ್ದದ್ದು ಕೆಲವು ಬೆರಳೆಣಿಕೆಯ ನಾಯಕರಲ್ಲಿ ಮಾತ್ರ. ಯಾರೇ “ಲಾಲ್ ಸಲಾಂ” ಎಂದಾಗಲೆಲ್ಲ ನನಗೆ ಈ ವೈರುಧ್ಯಗಳು ಕಾಡುತ್ತವೆ! ರಕ್ತ ಹೀರುತ್ತಿದ್ದ ಜಮೀನುದಾರರನ್ನ, ಶಾನುಭೋಗರನ್ನು ಸದೆಬಡಿಯಲೋಸುಗ ಆರಂಭವಾದ ಈ ಚಳುವಳಿ ಮುಂದೆ ಲಕ್ಷಾಂತರ ಜನರನ್ನ (ಅಮಾಯಕ and otherwise) ಬಲಿತೆಗೆದುಕೊಂಡು, ಸರ್ಕಾರಗಳಿಗೆ, ನ್ಯಾಯಾಲಯಗಳಿಗೆ ಮತ್ತು ಸ್ಥಾಪಿತ ಪ್ರಜಾಪ್ರಭುತ್ವಕ್ಕೆ ಕಂಟಕವಾಗಿ ನಿಂತಿದೆ. 

ನಾನು ಚಿಕ್ಕಂದಿನಲ್ಲಿ ನೋಡಿದ ತೆಲುಗು ಸಿನಿಮಾಗಳ ನಕ್ಸಲ್ ಹೋರಾಟದಂತೆ ನಿಜಾರ್ಥದಲ್ಲಿ ಐದು ಪರ್ಸೆಂಟ್ ಕೂಡ ಇದು ಇಲ್ಲ ಅನ್ನಿಸಿ ಬೇಜಾರಾದದ್ದು ಇದೆ. ಹರೆಯದಲ್ಲಿ ಇಷ್ಟವಾಗುತ್ತಿದ್ದ ಎಡಪಂತೀಯ ವಿಚಾರಗಳು ನಿಧಾನವಾಗಿ ಸಮಾಜವಾದದತ್ತ ತಿರುಗಿದ್ದು ಇದೇ ಕಾರಣಕ್ಕೇ ಇರಬೇಕು ಅನ್ನಿಸುತ್ತಿದೆ. ಇವತ್ತು ಈ ಕಾಮ್ರಡೆಗಳ ಬಳಿ ಹತ್ತಾರು ಸಾವಿರ ಕೋಟಿ ಹಣವಿದೆ ಆದರೆ ಸೈದ್ಧಾಂತಿಕ ನೆಲೆ?

Comments

Popular posts from this blog

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ