Skip to main content

ಸಾಸಿವೆ ತಂದವಳು

 ನೋವಿನ ನೆಂಟರು !  


ಇತ್ತೀಚೆಗೆ ನನ್ನ ಸುತ್ತಮುತ್ತಲಿನಲ್ಲಿ ಹಲವು ಜನ ಕ್ಯಾನ್ಸರ್ ಖಾಯಿಲೆಗೆ ತುತ್ತಾಗುವುದನ್ನ ಕಂಡಿದ್ದೇನೆ. ಅವರಲ್ಲಿ ಹೆಚ್ಚು ಜನ ಮಹಿಳೆಯರೇ ಆಗಿರುವುದು ಬೇಸರದ ಮತ್ತು ಸೋಜಿಗದ ಸಂಗತಿ. ಪುರುಷರು ಹೆಚ್ಚಾಗಿ ಹೃದಯ ಸಂಬಂಧಿ ಕಾರಣಗಳಿಗೆ ಬಲಿಯಾದರೆ ಹೆಣ್ಣುಮಕ್ಕಳು ಕ್ಯಾನ್ಸರ್ ಗೆ ಗುರಿಯಾಗುತ್ತಿದ್ದಾರೆ.

ನನ್ನ ಅಮ್ಮನ ಅಕ್ಕಂದಿರಲ್ಲಿ ಇಬ್ಬರು ಕ್ಯಾನ್ಸರ್ಗೆ ಬಲಿಯಾದದ್ದರಿಂದ ಮತ್ತು ಅವರು ತೀರಿಕೊಂಡಾಗ ಅವರ ಮಕ್ಕಳುಗಳು ಅಂದರೆ ನನ್ನ ಅಣ್ಣ ಅಕ್ಕಂದಿರು ಪುಟ್ಟಮಕ್ಕಳಾಗಿದ್ದರಿಂದ ಈ ಪುಸ್ತಕ ಹೆಚ್ಚು ಪರ್ಸನಲ್ ಆಗತೊಡಗಿತು. ಇದನ್ನು ಮೊದಲು ಓದಿದ ಅಮ್ಮ ಆಗಾಗ ವಿಷಣ್ಣಳಾಗುತ್ತಿದ್ದಳು, ನಾನೂ ಕಾರಣ ಕೇಳದೆ ಸುಮ್ಮನಿದ್ದೆ . ಸ್ವಲ್ಪ ದಿನಗಳನಂತರ ಪುಸ್ತಕವನ್ನು ಕೈಲಿ ಹಿಡಿದೇ ಆಳುತ್ತಿದ್ದಳು ಆಗ ನನಗೆ ಅವಳು ಅನ್ಯಮನಸ್ಕಳಾಗುತ್ತಿದ್ದುದರ ಕಾರಣ ಹೊಳೆಯಿತು.

ಭಾರತಿಯವರು ತಮ್ಮ ಅನುಭವವನ್ನು ಅತ್ಯಂತ ಧೈರ್ಯವಾಗಿ, ನೇರವಾಗಿ, ಜೋವಿಯಲ್ ಆಗಿ ನಿರೂಪಿಸಿದರೂ ನೋವಿನ ಕಥೆಯನ್ನು ಹೇಳುವಾಗ ನೋವನ್ನು ಹೇಗೆ ಮರೆಮಾಚುವುದು? ಅದರಲ್ಲೂ ಇದರ ವೈಯಕ್ತಿಕ ಅನುಭವವಿರುವ ಅಮ್ಮನಂತವರು ಅಲ್ಲಿನ ಲವಲವಿಕೆಯ ವಿಷಯವನ್ನು ಹೆಚ್ಚು ಗಮನಿಸರು.

ಆದರೆ ಇದು ಪ್ರಸ್ತುತ ಕ್ಯಾನ್ಸರ್ನಿಂದ ನರಳುತ್ತಿರುವವರು ಮತ್ತವರ ಮನೆಯವರಿಗೆ ಕತ್ತಲನ್ನು ದಾಟಬಹುದಾದ ಒಂದು ಪುಟ್ಟ ಹಣತೆ. ಹಾಗೆಯೇ ಬಳಲುತ್ತಲಿರುವರ ಜೊತೆ ಮನೆಯ ಹೊರಗಿನವರು ಹೇಗೆ ವ್ಯವಹರಿಸಬೇಕು ಎಂಬುದರ 

ಸೂಚನಾ ಪಲಕ ಕೂಡಾ. 

ಒಮ್ಮೆ ನನ್ನಪ್ಪನನ್ನು ನೋಡುತ್ತಿದ್ದ ಡಾಕ್ಟರ್ ಒಬ್ಬರನ್ನ ಅವರ ಪಾರ್ಕಿನ್ಸನ್ ಪರಿಸ್ಥಿತಿಯ ಮೇಲೆ ಒಂದು ಪ್ರಶ್ನೆ ಹೆಚ್ಚು ಕೇಳಿದಾಗ ಅವರು “ ಇದಕ್ಕೆಲ್ಲಾ ಕ್ಯೂರ್ ಇಲ್ಲಾ ರೀ ಸುಮ್ನೆ ಮನೆಲ್ ಇಟ್ಕೊಂಡ್ ನೋಡ್ಕೊಳ್ಳಿ ಅಷ್ಟೇ” ಅಂದಿದ್ದರು. 

ಆಗ ನನಗೆ ಬಂದ ಸಿಟ್ಟಿಗಿಂತಾ ಅದ ನೋವು, ನಿರಾಶೆ ಅಷ್ಟಿಷ್ಟಲ್ಲ. ಅಮ್ಮನೂ ಅಲ್ಲೇ ಇದ್ದಳಲ್ಲ , ಅವಳಿಗೆ ಹೇಗಾಗಿರ ಬೇಡ? ಇದನ್ನು ಇಲ್ಲಿ ಹೇಳಿದ ಕಾರಣ ಭಾರತಿಯವರಿಗೆ ತಮ್ಮ ಖಾಯಿಲೆಯ ಬಗ್ಗೆ ಮೊದಲಬಾರಿಗೆ ಗೊತ್ತಾಗುವುದೂ ಇದೇ ರೀತಿಯ ಸಹಾನುಭೂತಿಯಿರದ ವೈದ್ಯರಿಂದ! 

ಅಲ್ಲಿಂದ ಅವರು ಕುಗ್ಗಿ, ಒಗ್ಗಿ, ನೋವುಂಡು, ನಂಬಿಕೆ ಕಳೆದುಕೊಂಡು, ಸಟೆದೆದ್ದು , ಬಂದದ್ದನ್ನು ಎದುರಿಸಿ ಮತ್ತೆ  ಎದ್ದು ನಿಲ್ಲುವ ಪ್ರಕ್ರಿಯೆಯ ಕಥನವೇ ಸ್ಪೂರ್ತಿದಾಯಕ. 

ಅನಂತಮೂರ್ತಿಯುವರು ಈ ಕೃತಿ ಎಲ್ಲ ಭಾಷೆಗಳಲ್ಲೂ ಅನುವಾದವಾಗಬೇಕು ಎಂದಿದ್ದಾರೆ. ಅದರ ಅವಶ್ಯಕತೆ ಖಂಡಿತಾ ಇದೆ. ಆ ದೇವರಿಗೆ ಹೋಗಿ ಇಲ್ಲಿ ಪೂಜೆ ಮಾಡಿಸಿ , ಅಯುರ್ವೇದ ಮಾಡಿಸಿ ಎನ್ನುವವರ ಮಾತನ್ನೂ ಕೇಳುತ್ತಾ ಈ ಪುಸ್ತಕವನ್ನು ಒಮ್ಮೆ ಪೂರ್ತಿ ಓದಿದರೆ ಮನಸ್ಸಿಗೆ ಚೈತನ್ಯ ಮತ್ತು ದೇಹಕ್ಕೆ ಕೊಂಚ ಸಟೆದೇಳುವ ಶಕ್ತಿ ಬಂದೀತು !

Comments

Popular posts from this blog

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...