Skip to main content

ರೌದ್ರಾವರಣo - Ananta Kunigal

 ಅನಂತ ಕುಣಿಗಲ್ ನಮ್ಮ ಜಿಲ್ಲೆಯವರು.

ಹಳ್ಳಿಯಲ್ಲಿ ಬೆಳೆದು ಪೇಟೆಯಲ್ಲಿ ಬದುಕು ಕಟ್ಟಿಕೊಂಡವರು. ಇಡೀ ಸಾಹಿತ್ಯ ಬಳಗದ ಜೊತೆಗೆ ತಮ್ಮನ್ನು ಗುರುತಿಸಿಕೊಂಡಿರುವವರು. ಒಮ್ಮೆ ಪುಸ್ತಕಗಳ ವ್ಯಾಪಾರದ ಬಗ್ಗೆ ಮತ್ತು ಅದರೊಳಗಿನ ರಾಜಕೀಯದ ಬಗ್ಗೆ ಅಂಕಣ ಬರೆದಿದ್ದರು ಅದನ್ನು ಓದಿ ಇಷ್ಟು ಚಿಕ್ಕ ವಯಸ್ಸಿಗೆ (25) ಇಷ್ಟೆಲ್ಲಾ ಅರ್ಥ ಮಾಡಿಕೊಂಡಿದ್ದಾರೆ ಎಂದು ಖುಷಿ ಆತಂಕ ಆಯಿತು. ಖುಷಿ ಅವರ ತಿಳುವಳಿಕೆಯ ಬಗ್ಗೆ ಮತ್ತು ಆತಂಕ ಅದು ಅವರನ್ನು ಸಿನಿಕತನಕ್ಕೆ ದೂಡಬಹುದೇನೋ ಎಂಬುದರ ಬಗ್ಗೆ!

ಇಷ್ಟೆಲ್ಲಾ ಹೇಳಿದ ಉದ್ದೇಷ ನಾನು ಓದಿದ ಅವರ ಕಾದಂಬರಿ "ರೌದ್ರಾವರಣo ". ಅವರೇ ಹೇಳುವ ಹಾಗೆ ಅದು ತನ್ನ ರೋಚಕತೆಯನ್ನ ಕಡೆಯವರೆಗೂ ಉಳಿಸಿಕೊಂಡಿದೆ ಮತ್ತು ಅದನ್ನು ಅವರ ಮುಂದಿನ ಕಾದಂಬರಿ " ಕಾಡ್ಗಿಚ್ಚಿ " ಗೂ ದಾಟಿಸಿದೆ. ಇತ್ತೀಚೆಗೆ ಏನೋ ಗಹನವಾದುದನ್ನು ಓದಲು ಹೊರಟ ಓದುಗ ಓದಿನ ಸಹಜ ಖುಷಿಯನ್ನು ಕಳೆದುಕೊಳ್ಳ ತೊಡಗಿದ್ದಾನೆ ಅಂತಹವನಿಗೆ ಈ ಕಾದಂಬರಿ ಓದಿನ ಖುಷಿಯನ್ನೂ ಜೊತೆಗೆ ಭಾರತದ ಹಳ್ಳಿಯೊಂದರ ಒಳ ಮಜಲುಗಳನ್ನೂ, ವರ್ಗ ಸಂಘರ್ಷ, ಹಾದರ, ತಿಕ್ಕಾಟ, ರಾಜಕೀಯ ಮೊದಲಾದ ಅನುದಿನದ ಅವಸ್ಥೆಯನ್ನು ಸರಳವಾಗಿ ಕಾಣಿಸುತ್ತದೆ. ಈ ಕಾದಂಬರಿ ಕಳೆದ ಬಾರಿಯ ಕೇಂದ್ರ ಸರ್ಕಾರ ಕೊಡುವ ಯುವ ಪುರಸ್ಕಾರಕ್ಕೂ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು ಎಂದು ಓದಿದ ನೆನಪು. ಅನಂತರವರು ಹೀಗೆಯೇ ಬರೆಯುತ್ತಿರಲಿ... ಅವರಿಗೆ ಎಲ್ಲ ಪುರಸ್ಕಾರಗಳೂ ಸಿಗಲಿ ಮತ್ತು ಅವು ಅವರನ್ನು ಪ್ರೋತ್ಸಾಹಿಸುತ್ತಿರಲಿ

Comments

Popular posts from this blog

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ