Skip to main content

One part woman : Perumal Murugan

 ಪೆರುಮಾಳ್ ಮುರುಗನ್ ನಮ್ಮ ಕಾಲದ ಅತ್ಯಂತ ಸೂಕ್ಷ್ಮ, ಅಪೂರ್ವ ಮತ್ತು ಅತ್ಯುತ್ತಮ ಬರಹಗಾರರು. ಗಾಢವಾದ ದೇಸಿ ಒಳನೋಟ, ಜೀವನಾನುಭವ, ಸಮಾಜದ ಪದರಗಳು, ಮನುಷ್ಯನ ಹಸಿವು, ಲೋಲುಪತೆ, ಸಣ್ಣ ಬುದ್ಧಿ, ಮಿ


ತಿಗಳು, ಧಾರಾಳತೆ, ನಂಬಿಕೆಗಳು, ಆಚರಣೆಗಳು ಮುಂತಾದವುಗಳನ್ನು ಒಳ ಮತ್ತು ಹೊರಗಣ್ಣಿನಿಂದ ಏಕಕಾಲಕ್ಕೆ ನೋಡುವ ಛಾತಿಯುಳ್ಳವರು. 


One part woman ನ್ನಿನ ಇಂಗ್ಲಿಷ್ ಅನುವಾದಿತ ಕೃತಿಯೇ ಈ ಮಟ್ಟದಲ್ಲಿರಬೇಕಾದರೆ ಮೂಲ ತಮಿಳಿನ ಅನುಭವ ಹೇಗಿರಬಹುದು ಎಂಬ ಆಲೋಚನೆಯೇ ಮತ್ಸರಕ್ಕೆ ಕಾರಣವಾಗಬಹುದು. ಅತ್ಯಂತ ಮಿತವಾಗಿ ಮಾತನಾಡುವ (ತಮಿಳಿನಲ್ಲಿ) ಪೆರುಮಾಳ್ ಮುರುಗನ್ನರ ಈ ಕೃತಿ ಬಿಡುಗಡೆಯಾದಾಗ ಸಂಪ್ರದಾಯವಾದಿಗಳಿಂದ ಮತ್ತು ಇತರೆ ಗುಂಪುಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಕಾರಣ ಈ ಕೃತಿಯಲ್ಲಿ ಸಂತಾನವಿಲ್ಲದ ದಂಪತಿ ಸಂತಾನಕ್ಕಾಗಿ ಅರಸುವ ದಾರಿ ! ಇಲ್ಲಿ ಸ್ತೂಲವಾಗಿ ' ವಂಶವೃಕ್ಷದ ' ಎಳೆಯನ್ನು ಕಾಣಬಹುದು. 


ಒಂದು ಹಂತದಲ್ಲಿ ಈ ಪುಸ್ತಕವನ್ನು ಬ್ಯಾನ್ ಮಾಡಬೇಕೆಂಬ ತೀವ್ರ ಒತ್ತಡ ಇದ್ದಿತು. ಇದಕ್ಕೆ ಬೇಸತ್ತ ಪೆರುಮಾಳ್ ಸ್ವಲ್ಪ ಮೆತ್ತಗಾದರು ಮತ್ತು ತಾನು ಇನ್ನು ಮುಂದೆ ಬರೆಯುವುದೇ ಇಲ್ಲವೆಂದು ನೊಂದುಕೊಂಡರು. ನಂತರದ ದಿನಗಳಲ್ಲಿ ತಮ್ಮ ಅಭಿವ್ಯಕ್ತಿಗೆ ಮೇಕೆಯಂತ ನಿರುಪದ್ರವಿ ಪ್ರಾಣಿಯನ್ನು ನೆಚ್ಚಿಕೊಂಡರು. ಇದಕ್ಕೆ ಅವರು ಕೊಟ್ಟ ಕಾರಣ ಹಸು ಪವಿತ್ರ, ಹಂದಿ ಅನಿಷ್ಟ, ಹುಲಿ ದೇವರ ವಾಹನ ಇತರ ಪ್ರಾಣಿಗಳೂ ಸಹ ಒಂದಿಲ್ಲೊಂದು ರೀತಿಯಲ್ಲಿ ಕಾಂಟ್ರವರ್ಸಿ ಸೃಷ್ಟಿಸಬಹುದು ಆದರೆ ಮೇಕೆಗೆ ಅಂತಹಾ ಕಷ್ಟವಿಲ್ಲ ಎಂಬುದು. ಇದು ಹಾಸ್ಯಾಸ್ಪದ ಅನ್ನಿಸಿದರೂ ಸೃಜನಶೀಲ ವ್ಯಕ್ತಿಯೊಬ್ಬನ ಅಭಿವ್ಯಕ್ತಿಗೆ ಹೇಗೆ ಸಮಾಜ ವಿರೋಧ ವ್ಯಕ್ತಪಡಿಸುತ್ತದೆ ಎನ್ನುವುದು ಅತ್ಯಂತ ಕಳವಳಕಾರಿ. 


ಲೇಖಕನೊಬ್ಬ ತನ್ನ ಅಭಿವ್ಯಕ್ತಿಯ ಇತಿ ಮಿತಿ ಜವಾಬ್ಧಾರಿಯನ್ನು ಅರಿಯಬೇಕೆ? ಅರಿತು ಅದರಲ್ಲೇ ಬರೆಯಬೇಕೆ ಅಥವಾ ಅದನ್ನು ಮೀರಬೇಕೇ ಎಂಬುದೊಂದು ಗಹನವಾದ ಜಿಜ್ಞಾಸೆ. ಇದರ ಉತ್ತರ ಸುಲಭವಲ್ಲ. ನಾನಾ ಆಚಾರ, ವಿಚಾರ, ಪಂಥ, ಧರ್ಮ, ಜಾತಿ, ರೀತಿ, ಉಡುಗೆ-ತೊಡುಗೆ, ಆಹಾರದ ಕಟ್ಟುಪಾಡುಗಳಿರುವ ನಮ್ಮ ದೇಶದಲ್ಲಿ ಸೃಜನಶೀಲ ವ್ಯಕ್ತಿಯೊಬ್ಬನಿಗೆ ಎಷ್ಟು ಸರಕು ಸಿಗಬಹುದೋ ಅಷ್ಟೇ ಕಷ್ಟದ ಹಾದಿಯನ್ನೂ ಸವೆಸಬೇಕಾಗುತ್ತದೆ. ಈ ಹಾದಿಯನ್ನು ಪೆರುಮಾಳ್ ಮುರುಗನ್ ಜತನದಿಂದಲೇ ಕ್ರಮಿಸಿದ್ದಾರೆ. 


" One part woman" ಗೆ ಬರುವುದಾದರೆ ಇದೊಂದು ಆಧುನಿಕ ಕ್ಲಾಸಿಕ್. ಲೇಖಕನೊಬ್ಬ ತನ್ನ ಸೃಜನಶೀಲತೆಯ ಮತ್ತು ಅರಿವಿನ ಉತ್ತುಂಗದಲ್ಲಿದ್ದಾಗ ಮಾತ್ರ ಬರೆಯ ಬಹುದಾದಂತಹ ಕೃತಿ. 

Comments

Popular posts from this blog

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...