Skip to main content

" ನಾನು ಪಾರ್ವತಿ " : ಜೋಗಿ


ಈ ಪುಸ್ತಕವನ್ನು ನಾನು ಒಂದೇ ಗುಕ್ಕಿನಲ್ಲಿ ಓದಿದೆ. 
ಜೋಗಿಯವರ ನಿರೂಪಣೆ ಇದ್ದರೂ ಈ ಪುಸ್ತಕ ಪಾರ್ವತಮ್ಮನವರ ಮಾತುಗಳಲ್ಲೇ ಭಾಗಷಃ ಬಂದಿರುವುದು ಜೋಗಿಯವರ ಪುಸ್ತಕಗಳನ್ನು ಓದಿದ ಯಾರಿಗೂ ಸುಲಭವಾಗಿ ಹೊಳೆವ ಸಂಗತಿ. ಇದು ಬೇಕಾಗಿತ್ತೂ ಕೂಡ ಅನ್ನಿಸಿತು. 
ನಮಗೆಲ್ಲಾ ಡಾ.ರಾಜ್ ರ ಧೈತ್ಯ ಪ್ರತಿಭೆ ಬಗ್ಗೆ, ಪಾರ್ವತಮ್ಮನೆಂಬ ಗಟ್ಟಿಗಿತ್ತಿಯ ಬಗ್ಗೆ ಗೊತ್ತು. 
ಆದರೆ ಅವರ ತಿಳಿಹಾಸ್ಯದ ಪ್ರವೃತ್ತಿಯ ಬಗ್ಗೆ ಗೊತ್ತಾ ? ಅವರ ನೇರವಂತಿಕೆ ಮತ್ತು ನಿಷ್ಟೂರತೆಯ ಬಗ್ಗೆ ಗೊತ್ತಾ ? 
ಈ ಪುಸ್ತಕ ಅವನ್ನೆಲ್ಲಾ ಗೊತ್ತು ಮಾಡಿಕೊಡುತ್ತದೆ ! ಅಷ್ಟೇ ಅಲ್ಲದೆ ಅವರ ಸಾಹಿತ್ಯದ ಒಲವಿನ ಬಗ್ಗೆ, ಅವರಿಗೆ ಇಷ್ಟವಾದ ಕಾದಂಬರಿಯ, ಅಥವಾ ಕಥೆಯನ್ನು ಸಿನಿಮಾ ಮಾಡಲು ಅವರು ಸಂಪರ್ಕಿಸಿ ಕೈಸುಟ್ಟುಕೊಂಡ ಲೇಖಕರ ಬಗ್ಗೆ, ಅವರ ಮನೆಗೆ ಬಂದು ಜಾಂಡಾ ಹೂರಿ, ತಿಂಗಳುಗಳ ಗಟ್ಟಲೆ ಕಳೆಯುತ್ತಿದ್ದ ಚೌರಿಕನ ಬಗ್ಗೆ , ಡಾ. ರಾಜ್ ಅವರ ಮಾಂಸ ಪ್ರಿಯತೆ ಬಗ್ಗೆ, ಅವರು ಸಹಾಯ ಮಾಡಿದ ಅಸಂಖ್ಯ ಕಲಾವಿದರು, ತಂತ್ರಜ್ಞರು ಮತ್ತು ಮನೆಕೆಲಸದ ಹುಡುಗರ ಬಗ್ಗೆ ..... ಒಟ್ಟಿನಲ್ಲಿ ಕನ್ನಡ ಚಿತ್ರರಂಗ ನಡೆದುಬಂದ ಅಖಂಡ ೬೦ ವರ್ಷಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ನಿರೂಪಿಸಿದ್ದಾರೆ.
ಪಾರ್ವತಮ್ಮನವರಿಗಿದ್ದ ಸಿನಿಮಾ ಜಾಣ್ಮೆಯಬಗ್ಗೆ ಹೇಳಬೇಕೆಂದರೆ " ಹಿನ್ನೆಲೆ ಸಂಗೀತ ಇರುವಾಗ ಬೇಕಾದರೆ long shot ಹಾಕಿ , ಸಾಹಿತ್ಯ ಬಂದಾಗ close -up ಇರಲಿ , ಆಗಲೇ ಭಾವನೆಗಳು-ಸಾಹಿತ್ಯ ಅರ್ಥವಾಗೋದು " ಅನ್ನುತ್ತಾರೆ !
ಅವರ ಗರಡಿಯಲ್ಲಿ ಬಂದ ಮಯೂರ, ಶ್ರೀ ಕೃಷ್ಣದೇವರಾಯ, ಸನಾದಿ ಅಪ್ಪಣ್ಣ ಯಾವುದಕ್ಕೂ ಅವಾರ್ಡುಗಳು ಬರದದನ್ನು ಅವರು ಬೇಜಾರಿನಿಂದ ಹೇಳಿಕೊಳ್ಳುತ್ತಾರೆ.
ಜನ ನೋಡದ ಸಿನಿಮಾಕ್ಕೆ ಅದ್ಯಾಕೆ ಅವಾರ್ಡು ಸಬ್ಸಿಡಿ ಕೊಡುತ್ತಾರೋ ಎಂಬುದು ಅವರ ಯಕ್ಷ ಪ್ರಶ್ನೆ ! ಕೆಲವೊಮ್ಮೆ ನಮ್ಮದೂ ಕೂಡ.
ಅವರ ಅಷ್ಟಗಲದ ಕುಂಕುಮ ನನಗೆ ನಮ್ಮ ತುಮಕೂರಿನಲ್ಲಿ ಗಂಡಸಿನ ಸಮಕ್ಕೆ ನಿಂತು ದಿನನಿತ್ಯ ತರಕಾರಿ ಮಾರುವ " ತಿಗಳರ " ತಾಯಂದಿರನ್ನೂ, ಹಾಗೆಯೇ ನಸುಕಿಗೇ ಮೀನಿನ ಮಂಕರಿಯನ್ನು ಮಂಗಳೂರಿನ ಪಣಂಬೂರಿನಿಂದ ಸ್ಟೇಟ್ ಬ್ಯಾಂಕ್ ಗೆ ಒಯ್ಯುವ " ಮೊಗವೀರರ " ತಾಯಂದಿರನ್ನು ನೆನಪಿಸುತ್ತಿದೆ.
ಒಟ್ಟಿನಲ್ಲಿ ಪಾರ್ವತಮ್ಮನವರ ಹಣೆಯ ಅಗಲವಾದ ಕುಂಕುಮ ಮಹಿಳೆ ಒಬ್ಬರ ಗಟ್ಟಿತನದ, ಸ್ವಾಲಂಭನೆಯ, ಧೈರ್ಯದ, ಮಣ್ಣಿನ ಸೊಗಡಿನ ಮತ್ತು ಮಮತೆಯ ಸಂಕೇತವೇ ಅನ್ನಿಸುತ್ತದೆ.
" ನಾನು ಪಾರ್ವತಿ " ಒಪ್ಪವಾಗಿ ಒಪ್ಪುವ ಶೀರ್ಷಿಕೆ !

Comments

Popular posts from this blog

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...