" ಹೀಗಿದ್ದರು ಕುವೆಂಪು " ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ ! ಸಾಧಾರಣವಾಗಿ ನಾನು ಇಷ್ಟುಬೇಗ ಯಾವ ಪುಸ್ತಕವನ್ನೂ ಓದುವುದಿಲ್ಲ , ಆ ಮಟ್ಟಿಗಿನ ಏಕಾಗ್ರತೆ ಕೊರತೆ ನನ್ನ ಬಲಹೀನತೆಗಳಲ್ಲಿ ಒಂದು ! ಈ ಪುಸ್ತಕವನ್ನು ಬರೆದವರು ಪ್ರಾತಃಸ್ಮರಣೀಯರಾದ ಡಾ. ಪ್ರಭುಶಂಕರರು ಕುವೆಂಪು ಅವರ ಮಾನಸ ಪುತ್ರ ಎಂದೇ ಕರೆಯಿಸಿಕೊಂಡ ಶ್ರೀಯುತರು, ತಾವು ಕಂಡಂತೆ ಕುವೆಂಪು ಹೇಗಿದ್ದರು ಎಂಬುದನ್ನು ವಿವರಿಸಿದ್ದಾರೆ. ಅವರೇ ಹೇಳುವಂತೆ ವಯಸ್ಸಿನ ಕಾರಣದಿಂದ ಬಹಳಷ್ಟು ವಿಷಯಗಳು ಪುಸ್ತಕದಿಂದ ದುರದೃಷ್ಟವಶಾತ್ ದೂರಾಗಿವೆ ! ಆದಾಗ್ಯೂ , ಕುವೆಂಪುರವರ ಗುರುಭಕ್ತಿ, ವೈಸ್ ಚಾನ್ಸಲರ್ ಹುದ್ದೆ, ರಾಮಕೃಷ್ಣ-ವಿವೇಕಾನಂದರ ಬಗ್ಗೆ ಅವರಿಗೆ ಇದ್ದ ಅಪಾರವಾದ ಗೌರವ, ಪಾಠ ಪ್ರವಚನಗಳನ್ನ ಮಾಡುತಿದ್ದ ರೀತಿ, ಸ್ವವಿಮರ್ಶಾ ಮನೋಭಾವ, ಗಾಂಭೀರ್ಯ ಮತ್ತು ಹಾಸ್ಯ ಪ್ರವೃತ್ತಿ, ಅವರ ತಲ್ಲಣಗಳು, ಮಕ್ಕಳ ಮೇಲೆ ಅವರಿಗಿದ್ದ ಪ್ರೀತಿ, ಸಮಯ ಹಾಳುಮಾಡದೆ ಬರೆವುದನ್ನೇ ರೂಡಿಸಿಕೊಂಡ ಪರಿ....... ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಓದಿ ಅವರ ಮೇಲೆ ಇಲ್ಲಿಯವರೆವಿಗೂ ಇದ್ದ ಪೂಜ್ಯ ಮನೋಭಾವ ಪ್ರೀತಿಯಾಗಿ ಮಾರ್ಪಟ್ಟಿತು ! ಗಮನಿಸಿ : ತೇಜಸ್ವಿಯವರ ಬಗ್ಗೆ ಏನಾದರೂ ಇರಬಹುದೇ ಎಂದು ಹುಡುಕಿದವನಿಗೆ ..... ಕುವೆಂಪುರವರ ಕಾರಿನಲ್ಲಿ ಬಂಧಿಯಾಗಿದ್ದ ಬಾಲಕರಾದ "ತೇಜಸ್ವಿ ಮತ್ತು ಚೈತ್ರ " ಮಾತ್ರ ಇದಿರಾದರು ! ವಿಶ್ವಮಾನವ ಸಂದೇಶ ಸಾರಿದ...